ಮಂಗಳವಾರ, ನವೆಂಬರ್ 13, 2018

ನಿಮ್ಮೂರಿಗೂ ಕ್ಯಾನ್ಸರ್ ಟ್ರೆನ್...! ? - Cancer Train in your native !?


ಕೃಷಿಲೋಕ

 ನಿಮ್ಮೂರಿಗೂ ಬಂದೀತು ಕ್ಯಾನ್ಸರ್ ಟ್ರೆನ್...! ?


ಬರಹ: ಕೂಡಂಡ ರವಿ, ಹೊದ್ದೂರು.
ಮೊಬೈಲ್: 9686547124


ಸಾಮಾನ್ಯವಾಗಿ ಭಾರತದಲ್ಲಿ ಓಡಾಡುವ ಬಹುತೇಕ ರೈಲುಗಳಿಗೆ ವೈಶಿಟ್ಯಯಪೂರ್ಣವಾದ ಹೆಸರಿವೆ. ಆದರೆ, ವಾಡಿಕೆಯಾಗಿ ಕ್ಯಾನ್ಸರ್ ಟೈನ್ಕರೆಯಲ್ಪಡುವ ರೈಲು ಭಾರತದಲ್ಲಿ ಓಡಾಡುತ್ತದೆ. ಇದು ಹಲವರಿಗೆ ಅಚ್ಚರಿಯೇನಿಸಿದರೂ ಸತ್ಯ ! ಇದು ಪಂಜಾಬಿನಿಂದ ರಾಜಾಸ್ಥಾನದ ಬಿಕನೀರ್ ಪಟ್ಟಣಕ್ಕೆ ಸಾಗುತ್ತಿದೆ. ಈ ರೈಲು ಪ್ರತಿದಿನದ ತನ್ನ ಯಾತ್ರೆಯಲ್ಲಿ ಕನಿಷ್ಠ ೫೦-೭೦ಕ್ಕೂ ಅಧಿಕ ರೋಗಿಗಳನ್ನು ಹೊತ್ತೊಯ್ಯುತ್ತದೆ.  ರೈಲು ಭಟಿಂಡಾದಿಂದ ಬಿಕನೀರ್‌ವರೆಗಿನ ೩೨೬ ಕಿಲೋ ಮೀಟರ್ ಕ್ರಮಿಸುವುದು.

Pl watch my blogs 


Kodagu Darshini : http://koodanda.blogspot.com/
Kodagu Darshini (Kodagina Antaranga): https://koodagudarshini.blogspot.com/
Koodanda Ravi:
https://www.indiblogger.in › ...

Kaveri Dharshini : https://kaveridarashin.blogspot.com







ಮಿತಿಮೀರಿದ ಕೀಟನಾಶಕ 
೧೯೬೦-೭೦ದಶಕಗಳಲ್ಲಿ ಹಸಿರು ಕ್ರಾಂತಿಯ ಪರಿಣಾಮ ಪಂಜಾಬ್ ರಾಜ್ಯವೂ ಸಹಾ ಇದರ ಭಾಗವಾಗಿ ಸೇರ್ಪಡೆಗೊಂಡಿತ್ತು. ಹಸಿವಿನಿಂದ ಹೊರಬರಲು, ಅಧಿಕ ಇಳುವರಿಯ ಏಕೈಕ ಕನಸು ಹೊತ್ತಿದ್ದರು. ಇದರಿಂದಾಗಿ  ಅಂದಿನ ರೈತರು ಅರಿತೋ ಅರಿಯದೆಯೋ ಮನಬಂದಂತೆ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಭೂಮಿಗೆ ಸುರಿದರು. ಅದಕ್ಕೆ ತಕ್ಕ ಬೆಲೆಯನ್ನು ಅಲ್ಲಿನ ರೈತಾಪಿ ಕುಟುಂಬಗಳು ಇದೀಗ ತೆರುವಂತಾಗಿರುವುದು ವಿಪರ್ಯಾಸವೇ ಸರಿ.

ಪಂಜಾಬ್ ರಾಜ್ಯವು ದೇಶದ ವಿಸ್ತಾರದಲ್ಲಿ ಶೇಕಡಾ ೨ಪಾಲು ಪ್ರದೇಶವನ್ನು ಹೊಂದಿದೆ. ರಾಜ್ಯವು ಬಹುತೇಕವಾಗಿ ಕೃಷಿಯನ್ನೆ ಅವಲಂಬಿಸಿದೆ. ಇದು ದೇಶದಲ್ಲಿ ಬಳಕೆಯಾಗುವ ಶೇಕಡಾ ೧೫ ರಿಂದ ೨೦ ಶೇಕಡಾ ಕ್ರಿಮಿನಾಶಕಗಳನ್ನು ಬಳಸುತ್ತಿದೆಯಂತೆ ! ಪರಿಣಾಮ ಇಲ್ಲಿನ ಜನತೆಯ ಆಹಾರದಲ್ಲಿ ಯಥೇಚ್ಛವಾಗಿ ಕ್ರಿಮಿನಾಶಕಗಳು ಸೇರ್ಪಡೆಯಾಗುತ್ತಿವೆ. ಅಲ್ಲಿನ ನೆಲ-ಜಲ ಪೂರ್ಣವಾಗಿ ವಿಷಮಯವಾಗಿವೆ.  ಇವು ಮಾರಕವಾದ ಕ್ಯಾನ್ಸರ್ ಕಾಯಿಲೆಗೂ ಕಾರಣವಾಗುತ್ತಿವೆ. ಇಲ್ಲಿನ ಜನತೆಯ ಆರೋಗ್ಯವು ಈ ಕಾರಣದಿಂದಾಗಿ ಪ್ರತಿವರ್ಷವೂ ಕ್ಷಿಣಿಸುತ್ತಿದೆ.

ಪಂಜಾಬಿನ ರೈತ ಜರ್ನೆಲ್ ಸಿಂಗ್ ಜನತೆಯ ಆರೋಗ್ಯದ ಮೇಲೆ ರಾಸಾಯನಿಕಗಳ ಪರಿಣಾಮವನ್ನು ಗುರುತಿಸಿದರು.ಅವರ ಕುಟುಂಬದಲ್ಲಿಯೇ ೭ ಮಂದಿಯ ಮೇಲೆ ಕ್ಯಾನ್ಸರ್ ಧಾಳಿ ನಡೆಸಿತ್ತು. ಇವರಲ್ಲಿ ಮೂವರು ಅಸು ನೀಗಿದರು. ಈ ಕುರಿತು ಅಧ್ಯಯನ ಮಾಡುವಂತೆ ಅವರು ಕೃಷಿ ಸಂಶೋಧಕರನ್ನು ಪ್ರೆರೇಪಿಸಿದರು. ಮಿತಿಮೀರಿದ ರಾಸಾಯನಿಕಗಳ ಬಳಕೆಯಿಂದಾಗಿ ರಾಜ್ಯದಲ್ಲಿದ್ದ ನವಿಲುಗಳ ಸಂತತಿಯೇ ನಾಶವಾಯಿತು. ಜನತೆ ಕ್ರಿಮಿನಾಶಕ ಬಳಕೆಯನ್ನು ಸುರಕ್ಷಿತವಾಗಿ ಬಳಸುತ್ತಿಲ್ಲ ಎಂಬುವುದನ್ನು ಅವರು ಮನಗಂಡರು.



ಅಸಮರ್ಪಕ ಬಳಕೆ
ಪ್ರತೀ ಕ್ರಿಮಿನಾಶಕ ಡಬ್ಬಿ, ಪೊಟ್ಟಣಗಳ ಮೇಲೆ ಅದನ್ನು ಬಳಸುವ ವಿಧಾನ, ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ವಿವರವಾದ ಮಾಹಿತಿ ಇರುತ್ತದೆ. ಹಲವಾರು ಬಾರಿ ಇದರೊಂದಿಗೆ ಕರಪತ್ರವೂ ಇರುತ್ತದೆ.ಇದನ್ನು ಓದಿ ಸರಿಯಾಗಿ ಬಳಸಿದ್ದಲ್ಲಿ ಮುಂದೆ ಅಗಬಹುದಾದ ಅಪಾಯವು ತಪ್ಪುತ್ತದೆ. ಅಥವಾ ಕೊಂಚ ಇಳಿಮುಖವಾಗುತ್ತದೆ. ಆದರೆ, ಬಹುತೇಕ ರೈತರು ಅನಕ್ಷರಸ್ಥರಾಗಿರುವರು. ಕೆಲವರಿಗೆ ದೃಷ್ಟಿ ಮಂದವಾಗಿರುವುದರಿಂದ  ಅತೀ ಸಣ್ಣ ಅಕ್ಷರಗಳಲ್ಲ್ಲಿರುವ ಕರಪತ್ರಗಳನ್ನು ಓದುವ ಗೋಜಿಗೆ ಹೋಗುವುದೇ ಇಲ್ಲ ! ಹಲವರು ಇದನ್ನು ಓದಿದ್ದರೂ, ಅಪಾಯವಾಗುವ ಬಗ್ಗೆ ಮಾಹಿತಿ ಇದ್ದರೂ, ಗಣನೆಗೆ ತೆಗೆದುಕೊಳ್ಳುವುದಿಲ್ಲ. ಕ್ರಿಮಿನಾಶಕಗಳ ಬಳಕೆಗೆ ನಿಗದಿತ ಮಿತಿಯೂ ಇರುತ್ತದೆ. ಆದರೆ, ಬಹುತೇಕ ರೈತರು ತಮ್ಮ ಹೊಲದಲ್ಲಿನ ಕೀಟ ಬೇಗನೇ ಹತೋಟಿಗೆ ಬರುತ್ತದೆ ಎಂಬ ಭ್ರಮೆಯಲ್ಲಿ ಮುಳುಗಿ ಸೂಚಿತ ಪ್ರಮಾಣಕ್ಕಿಂತಲೂ ಹೆಚ್ಚಾಗಿ ಅವುಗಳನ್ನು ಬಳಸುವರು. ಕ್ರಿಮಿನಾಶಕ ಬಳಕೆ ಮಾಡುವಾಗ ಬೇಕಾಗುವ ರಕ್ಷಣಾ ಬಟ್ಟೆ- ಕೈಕಾಲು ಕವಚ, ಮುಖಕವಚಗಳನ್ನು ಬಳಸುವುದಿಲ್ಲ. ಪರಿಣಾಮವಾಗಿ ಕ್ರಿಮಿನಾಶಕ ಸಿಂಪಡಿಸುವ ಕಾರ್ಮಿಕರು ಬೇಗನೇ ಕಾಯಿಲೆಗೆ ಬಲಿಯಾಗುವರು. ಹಲವರು ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಕ್ರಿಮಿನಾಶಕ ಸಿಂಪಡಿಸುವರು. ಪರಿಣಾಮ ಇವು ಮೂಗು, ಬಾಯಿಗಳ ಮೂಲಕ ಮಾನವನ ದೇಹವನ್ನು ಸಲೀಸಾಗಿ ಸೇರುತ್ತವೆ. ಅಧಿಕ ಪ್ರಮಾಣದ ಕೀಟನಾಶಕಗಳ ಬಳಕೆಯಿಂದಾಗಿ ಮಕ್ಕಳ ನೆನಪಿನ ಶಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಿವೆ ಎಂದು ಅಧ್ಯಯನಗಳು  ಸಾಬೀತುಪಡಿಸಿವೆ. ಪಂಜಾಬಿನ ಜನಸಂಖ್ಯೆಯ ಶೇಕಡಾ ೬೦ ಭಾಗ ಕ್ಯಾನ್ಸರ್ ಪೀಡಿತರು. ಇವರಲ್ಲಿ  ಅಬಾಲ ವೃದ್ಧರೂ ಸೇರಿದ್ದಾರೆ.


ತಜ್ಞರ ಅಭಿಪ್ರಾಯಗಳು
ವಿಪರೀತ ರಸಗೊಬ್ಬರ, ಕೀಟನಾಶಕ ಬಳಕೆಯ ಪರಿಣಾಮ ಕುಡಿಯುವ ನೀರು-ಆಹಾರ ವಸ್ತುಗಳು ವಿಷಕಾರಿಯಾಗಿದೆ. ಪರಿಣಾಮ ಹಲವರು ಕುಡಿಯಲು ಫಿಲ್ಟರ್ ನೀರು ಬಳಸುತ್ತಿರುವರು. ಪಂಜಾಬಿನಲ್ಲಿ ಭಾರೀ ಪ್ರಮಾಣದಲ್ಲಿ ಕೀಟ ನಿಯಂತ್ರಕಗಳಾಗಿ ಸಾಕಷ್ಟು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ನೀರಿನ ಮತ್ತು ಆಹಾರ ಉತ್ಪಾದನೆಯ ಮೇಲೆ  ಪರಿಣಾಮ ಬೀರಿದೆ ಎಂದು ಕೃಷಿ ತಜ್ಞ ಡಾ. ಹೆಚ್. ಎಸ್. ಚಾಹಲ್ ತಿಳಿಸಿರುವರು.  ಚಂಡೀಘಡದ ಫೋಸ್ಟ್ ಗ್ರಾಜುಯೇಟ್ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಸಂಸ್ಥೆಯು ನಡೆಸಿದ ಸರ್ವೆಯ ಪ್ರಕಾರ ಇಲ್ಲಿ ಕ್ಯಾನ್ಸರ್‌ನಿಂದಾಗಿ ಸಾಯುವವರ ಸಂಖ್ಯೆ ವಾರ್ಷಿಕ ೫೧ನ್ನು  ದಾಟಿದೆ ! ೨೦೦೭ರ ಸ್ಟೆಟ್  ಆಫ್ ಎನ್ವರ್‌ಮೆಂಟ್ ವರದಿಯ ಪ್ರಕಾರ ಪಂಜಾಬಿನ ಮಾಲ್ವಾದಲ್ಲಿ  ರಾಜ್ಯದ ಶೇಕಡಾ ೭೫ ಕೀಟನಾಶಕಗಳನ್ನು ಬಳಸಲಾಗುತ್ತದೆ. ಇದು ಹಲವಾರು ಸಮಸ್ಯೆಗಳಿಗೆ ಮೂಲ ಕಾರಣವೆನ್ನುವರು. ಕೀಟನಾಶಕಗಳು ಆಹಾರದ ಸರಪಳಿಯನ್ನು ಪ್ರವೇಶಿಸಿರುವುದನ್ನು ಸಂಶೋಧನೆಗಳು ದೃಡೀಕರಿಸಿವೆ ಎಂದು ಓಸ್ವಾಲ್ ಕ್ಯಾನ್ಸರ್ ಆಸ್ಪತ್ರೆಯ ತಜ್ಞ ಸತೀಶ್ ಜೈನ್ ಆಭಿಪ್ರಾಯ .ರಾಸಾಯನಿಕ ಗೊಬ್ಬರದ ಬಳಕೆಯಿಂದ ಇಳುವರಿ ಕುಸಿತದ ವಿಚಾರವನ್ನು  ಮಾಜಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸಹಾ ಪ್ರಸ್ತಾಪಿಸಿದ್ದರು.

ಪಂಜಾಬ್ ಸರಕಾರವು ಕ್ಯಾನ್ಸರ್‌ನ ಗುಣ ಲಕ್ಷಣಗಳುಳ್ಳ ರೋಗಿಗಳ ಗಣತಿ ಮಾಡಲು ಇತ್ತಿಚೆಗೆ ಆರಂಭಿಸಿದೆ. ಅಂಕಿಅಂಶ ತಜ್ಞ ಅಜಯ್ ಶರ್ಮರ ಪ್ರಕಾರ ವಾರ್ಷಿಕ ಸಾವಿರಕ್ಕೂ ಅಧಿಕ ರೋಗಿಗಳು ದಾಖಲಾಗುತ್ತಿರುವರು.  ಪಂಜಾಬ್ ರಾಜ್ಯ ಸರಕಾರದ ವರದಿಯ ಪ್ರಕಾರ ಅಲ್ಲಿ ಪ್ರತಿದಿನವೂ ಸರಾಸರಿ ೧೮ ಮಂದಿ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ !


 ರೈಲು ಆಯಸ್ಕಾಂತದಂತೆ !
ಈ ರೈಲು ರಾತ್ರಿ ಪಯಣವನ್ನು ಮುಂದುವರಿಸುತ್ತದೆ. ಇದು ಕೀಟನಾಶಕಮತ್ತು ಕ್ಯಾನ್ಸರ್  ವಿರೋಧಿ ಹೋರಾಟಗಾರನ್ನು , ದೇಶ- ವಿದೇಶಿ ಪತ್ರಕರ್ತರನ್ನು  ರೈಲು ಅಸ್ಕಾಂತದಂತೆ ಆಕರ್ಷಿಸುತ್ತದೆ. ರೈಲಿನ ಪೋಸ್ಟರ್, ಬ್ಯಾನರ್‌ಗಳು, ವಿಡಿಯೋಗಳು ಹಲವಾರು ಅಂತರ್ ರಾಷ್ಟಿಯ ಸಮ್ಮೆಳನಗಳಲ್ಲಿ ಪ್ರಚಾರಗೊಂಡಿದೆ. ರೈಲಿನಲ್ಲಿ ಕಳೆದ ೫ ವರ್ಷಗಳಿಂದ ಪಯಣಿಸುತ್ತಿರುವ ರೋಗಿಗಳ ಸಂಖ್ಯೆಯು ಗಣನೀಯವಾಗಿ ಏರುತ್ತಲೇ ಇದೆ. ಈ ರೈಲಿನಲ್ಲಿ ಕ್ಯಾನ್ಸರ್ ರೋಗಿಗಳಿಗೆ ಪ್ರಯಾಣವು ಉಚಿತ. ರೋಗಿಯ ಜೊತೆ ಪ್ರಯಾಣಿಸುವ ಇಬ್ಬರು ಸಹಾಯಕರಿಗೆ ಶೇಕಡಾ ೭೫ರಷ್ಟು ರಿಯಾಯಿತಿಯೂ ಲಭ್ಯವಿದೆ. ಪಂಜಾಬಿನ ಸರಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆಯು ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ರೋಗಿಗಳು ರಾಜಾಸ್ಥಾನದ ಬಿಕನೀರ್‌ಗೆ ಚಿಕಿತ್ಸೆಗಾಗಿ ತೆರಳುವರು.  ಬಿಕನೀರ್‌ನಲ್ಲಿ ಆಹಾರ ಮತ್ತು ವಸತಿಯೂ ಪಂಜಾಬಿಗಿಂತಲೂ ತೀರಾ ಕಡಿಮೆ ವೆಚ್ಚದ್ದಾಗಿದೆ. ರಾಜಾಸ್ಥಾನದ ಬಿಕನೇರ್‌ನ ಆಚಾರ್ಯ ತುಳಿಸಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಎಂಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವರು. ರೈಲಿನಲ್ಲಿ ಸೂಕ್ತ ಸೌಲಭ್ಯವಿಲ್ಲದೆ, ರೋಗಿಗಳು ಮರದ ಬೆಂಚುಗಳಲ್ಲಿ, ನೆಲದಲ್ಲಿ ಮಲಗಿ ಪಯಣಿಸುವರು. ಈ ರೈಲು ರೋಗಿಗಳಿಗೆ ತಮ್ಮ ಕಷ್ಟಗಳನ್ನು ಹಂಚಿಕೊಳ್ಳುವ ಏಕೈಕ ಸ್ಥಳವಾಗಿದೆ.


ಇಳುವರಿ ಹೆಚ್ಚಳ-ಭ್ರಮೆ !
ಪಂಜಾಬಿನ ಹತ್ತಿ ಬೆಳೆ ಭಾರೀ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸಲಾಗುತ್ತದೆ. ಕ್ಯಾನ್ಸರ್ ರೈಲಿನಲ್ಲಿ ಸಾಗುವ ಬಹುತೇಕ ರೋಗಿಗಳು ತಮ್ಮ ರೋಗಕ್ಕೆ ಮಿತಿ ಮೀರಿದ ಕೀಟನಾಶಕಗಳ ಬಳಕೆ ಎಂಬುವುದನ್ನು ಒಪ್ಪಿಕೊಳ್ಳುವರು ! ನಾನು ಬೆಳೆದ ಹತ್ತಿಗೆ ವಿವಿಧ ಕೀಟನಾಶಕಗಳನ್ನು ೧೦ ಬಾರಿ, ತರಕಾರಿಗಳಿಗೆ ವಾರಕ್ಕೆ ಒಂದೆರೆಡು ಬಾರಿ ಸಿಂಪಡಿಸಿರುವುದಾಗಿ ೬೩ ವರ್ಷದ ರೈತ ಬಲ್ದೆವ್ ಸಿಂಗ್ ತಿಳಿಸಿದರು.ಕೀಟನಾಶಕಗಳ ಮಿತಿಮೀರಿದ ಬಳಕೆಯು ಕ್ಯಾನ್ಸರ್‌ಗೆ ಕಾರಣ ಎಂಬುದು ನನಗೆ ತಿಳಿದಿದೆ. ಆದರೆ, ಕೀಟನಾಶಕಗಳ ಬಳಕೆಯಿಂದ ಇಳುವರಿ ಹೆಚ್ಚುತ್ತದೆ ಎಂದು ಅದನ್ನು ಸಿಂಪಡಿಸುವೆ ಎಂದು ಅವರು ನುಡಿದರು.

 ದೇಶ-ವಿದೇಶಗಳ ದೃಷ್ಟಿಯಲ್ಲಿ ಪಂಜಾಬ್ ಸಿರಿವಂತ ರಾಜ್ಯ. ಆದರೆ, ಅಲ್ಲಿನ ಬಡ ಜನತೆ ತಮ್ಮನ್ನು ಕ್ಯಾನ್ಸರ್ ನಿಂದ ಉಳಿಸಿಕೊಳ್ಳಲು ಪಕ್ಕದ ರಾಜಾಸ್ಥಾನಕ್ಕೆ ಪ್ರಯಾಣಿಸುವುದು ವಿಪರ್ಯಾಸವೇ ಸರಿ. ಈ ರೈಲಿನಲ್ಲಿ ಪಂಜಾಬಿನ ಮಾನ್ಸ, ಸಂಗ್ರೂರ್, ಭಟಿಂಡಾ, ಫರಿದ್ಕೊಟ್ , ಮೋಗಾ, ಮುಂತಾದ ಪ್ರದೇಶಗಳ ಸಣ್ಣ ಮತ್ತು ಅತೀ ಸಣ್ಣ ರೈತಾಪಿ ಕುಟುಂಬದ ರೋಗಿಗಳು ಪಯಾಣಿಸುವರು. ಇವರಲ್ಲಿ ಬಹುತೇಕ ಎಲ್ಲರೂ ಕಲುಶಿತ ನೀರನ್ನು ನೇರವಾಗಿ ಬಳಸುವರು.. ೧೯೭೦ರ ದಶಕದಲ್ಲಿ ಆರಂಭವಾದ ಹಸಿರು ಕ್ರಾಂತಿಯ ಯಶಸ್ಸು ಪಂಜಾಬಿನ ಜನತೆಯ ಉಸಿರನ್ನೆ ಕಿತ್ತುಕೊಂಡಿದೆ ಎಂದು ಅಲ್ಲಿನ ಜನತೆ ದೂರುತ್ತಿದ್ದಾರೆ.



ಅಪಾಯ ಕಟ್ಟಿಟ್ಟ ಬುತ್ತಿ.
ಇದರ ಅಪಾಯಗಳ ಬಗ್ಗೆ ಬಹುತೇಕ ಮಾಧ್ಯಮಗಳು ಮೌನವಹಿಸಿವೆ. ನಮ್ಮ ಶಿಕ್ಷಣ ಪದ್ಧತಿಯಲ್ಲಿ ಇವುಗಳ ವಿಚಾರವನ್ನು ಇನ್ನೂ ಪ್ರಸ್ತಾಪಿಸಿಯೇ ಇಲ್ಲ.  ದೂರದ ಹಿರೋಶಿಮಾ-ನಾಗಸಾಕಿಯ ಅಣುಬಾಂಬಿನ ದುಷ್ಪರಿಣಾಮಗಳ ಬಗ್ಗೆ ತಿಳಿದಿರುವ ನಾವು, ನಮ್ಮ ಮಕ್ಕಳು ಮಧ್ಯಪ್ರದೇಶದ ಯೂನಿಯನ್ ಕಾರ್ಬೈಡ್ ಸಂತ್ರಸ್ತರ, ಕ್ಯಾನ್ಸರ್ ರೈಲಿನ  ಬಗ್ಗೆ ಸುಸ್ಪಷ್ಟವಾಗಿ ತಿಳಿದಿಲ್ಲ ! ಬಹುತೇಕವಾಗಿ ಕ್ಯಾನ್ಸರ್ ಬರಲು ತಂಬಾಕೇ ಕಾರಣವೆಂದು ಬಿಂಬಿಸಿ ಜನತೆಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಕ್ರಿಮಿನಾಶಕ ಬಳಕೆಯೂ ಇದಕ್ಕೆ ಕಾರಣವೆಂಬುದನ್ನು ಉದ್ದೆಶಪೂರ್ವಕವಾಗಿ  ಹಲವಾರು ಕಡೆ ಮುಚ್ಚಿ ಹಾಕಲಾಗುತ್ತಿದೆ. ಹಲವರು ಕ್ರಿಮಿನಾಶಕಗಳ ಡಬ್ಬಿ ಮತ್ತು ಪೊಟ್ಟಣಗಳನ್ನು ಮರು ಬಳಕೆ ಮಾಡುವರು. ಇದರಲ್ಲಿ ಆಹಾರ ಮತ್ತು ನೀರನ್ನು ಸಹಾ ಸಂಗ್ರಹಿಸುವರು.  ಕ್ರಿಮಿನಾಶಕ ಬಳಸುವಾಗ ಕೈಕಾಲು ತೊಳೆಯದೇ ಊಟ ಮಾಡುವರು. ಪಾನೀಯ ಸೇವಿಸುವರು. ಧೂಮಪಾನ ಮಾಡುವರು. ಇದರ ಪರಿಣಾಮ ದಿಡೀರ್ ಗೋಚರವಾಗದಿದ್ದರೂ, ಕಾಲಾನುಕ್ರಮೇಣ ಮಾನವನ ಶರೀರಕ್ಕೆ ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ.



 ಕೊನೆಹನಿ: ಮುಂಬರುವ ದಿನಗಳಲ್ಲಾದರೂ ನಾವು ರಾಸಾಯನಿಕ ಕೀಟನಾಶಕಗಳನ್ನು ಬಳಸದಿರೋಣ. ಬಳಸಿದರೂ, ಹಿತಮಿತವಾಗಿ ಬಳಸೋಣ. ನಮ್ಮ ಊರಿಗೆ ಕ್ಯಾನ್ಸರ್ ರೈಲು ಬರುವುದನ್ನು ತಡೆಯೋಣವೇ ?

https://www.youtube.com/watch?v=zIoZ8hwAZxA