ಸೋಮವಾರ, ಮಾರ್ಚ್ 12, 2018

ಅಧುನಿಕ ತಂತ್ರಜ್ಞಾನ 


                         ಕನ್ನಡದಲ್ಲಿ ಕೇಳುವ ಪುಸ್ತಕಗಳು ...!?


                                    ಬರಹ: ಕೂಡಂಡ ರವಿ,  ಕೊಡಗು.





ಬದಲಾವಣೆಯ ಕಾಲಘಟ್ಟದಲ್ಲಿ ಎಲ್ಲವೂ ವೇಗವಾಗಿ ಬದಲಾಗುತ್ತಿದೆ. ಇದಕ್ಕೆ ಯುಗವರ್ಗ ಹೆಚ್ಚಾಗಿ ಅಂಟಿಕೊಂಡಿದ್ದರೂ, ಇತರರು ಭಿನ್ನವಾಗಿಯೇನೂ ಇಲ್ಲ.  ಹಿರಿಯರೂ ಅಧುನಿಕತೆಯಲ್ಲಿ ಯುವವರ್ಗದವರೊಂದಿಗೆ ಸ್ಪರ್ಧೆಗೆ ಇಳಿದಿರುವುದು ಉತ್ತಮ ಬೆಳವಣಿಗೆ. ಇವರನ್ನು ದೃಷ್ಟಿಯಲ್ಲಿಟ್ಟುಕೊಂಡು ವಿವಿಧ ಭಾಷಾ ಪುಸ್ತಕಗಳು, ಸಾಹಿತ್ಯವು ಆಡಿಯೋ ರೂಪಕ್ಕೆ ಪರಿವರ್ತಿತವಾಗುತ್ತಿವೆ. ಇದರಂತೆ,  ಕನ್ನಡದ ಜನಪ್ರಿಯ ಸಾಹಿತಿಗಳು ಬರೆದ ಪುಸ್ತಕಗಳು ಸಿಡಿ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಓದುವ ಕಾಲ ನಿಧಾನವಾಗಿ ಮರೆಯಾಗುತ್ತಿದೆ. ಅಥವಾ ಆ ದಿಶೆಯಲ್ಲಿ ಸಾಗುವ ಸಮಯ ಸನ್ನಿಹಿತವಾಗುತ್ತಿದೆ.   ಬಹುತೇಕ ಮಂದಿಯ ಬಳಿ ಮೊಬೈಲ್ ಫೋನ್ ಇರುವುದರಿಂದ ಇವುಗಳನ್ನು ಜನತೆ ಸುಲಭವಾಗಿ ಕೇಳುತ್ತಾ ಸಾಗಬಹುದು.  ಬಸ್, ಕಾರು, ರೈಲುಗಳಲ್ಲಿ ಪ್ರಯಾಣ ಮಾಡುವ ಸಮಯ, ವ್ಯರ್ಥವಾಗಿ ಸರಿದು ಹೋಗಬಹುದಾದ ಸಮಯವನ್ನು ಸದ್ಭಳಕೆ ಮಾಡಲು ಇದು ಅತ್ಯುತ್ತಮ ಮಾರ್ಗ.


ಜ್ಞಾನಭಂಡಾರದ ವಿಸ್ತರಣೆ

 ಪುಸ್ತಕ ಓದುಗರನ್ನು ಮೀರಿ, ಕೇಳುಗರಿಗೂ ಸಾಹಿತ್ಯ ಸಂಪದ್ಭರಿತವಾದ ಪುಸ್ತಕಗಳು ತಲುಪಬೇಕು ಎಂಬ ಹೊಸ ಪರಿಕಲ್ಪನೆಯಿಂದ ಆಡಿಯೋ ಪುಸ್ತಕಗಳನ್ನು ಬುಕ್‍ಸ್ಟಕ್ ಹೊರತಂದಿದೆ. ಕಾಲದ ವೇಗದೊಂದಿಗೆ ಜನರೂ ಇಂದಿನ ದಿನಗಳಲ್ಲಿ ಓಡುತ್ತಿರಲೇಬೇಕಾಗಿದೆ. ಪರಿಸ್ಥಿತಿ ಹೀಗಿರಬೇಕಾದರೆ ಕನ್ನಡ ಪುಸ್ತಕಗಳನ್ನು ಓದಬೇಕೆಂದರೂ,  ಓದಲು ಸಮಯವಾದರೂ ಎಲ್ಲಿ ? ಓದಲು ಅಂತಹ ಆಸಕ್ತಿ ಇಲ್ಲದವರು ಕೂಡ ಪುಸ್ತಕಗಳತ್ತ ಆಕರ್ಷಿಸುವ ಉದ್ದೇಶದಿಂದ ಕನ್ನಡದ ಪ್ರಖ್ಯಾತ ಲೇಖಕರ ಪುಸ್ತಕಗಳನ್ನು ಬುಕ್‍ಸ್ಟಕ್ ಆಡಿಯೋ ರೂಪದಲ್ಲಿ ತಂದಿದೆ. ಇದರಲ್ಲಿ ಶೋತೃಗಳು ಹತ್ತಾರು, ನೂರಾರು, ಸಹಸ್ರಾರು ಬಗೆಯ ಬೇರೆ ಬೇರೆ ಭಾಷೆಗಳ ಪುಸ್ತಕಗಳನ್ನು ಕೇಳಿ ತಮ್ಮ ಜ್ಞಾನಭಂಡಾರವನ್ನು  ಮತ್ತಷ್ಟು ವಿಸ್ತರಿಸಿ ಕೊಳ್ಳಬಹುದಾಗಿದೆ.

ಆನ್‍ಲೈನ್‍ನಲ್ಲಿ ಕನ್ನಡದ ಪುಸ್ತಕಗಳು 

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಸಣ್ಣಕಥೆ ಕೇಳಬೇಕೆ? ಡಾ. ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ ಪುಸ್ತಕದಲ್ಲೇನಿದೆ ತಿಳಿಯಬೇಕೆ ?  ಡಾ. ಎಸ್.ಎಲ್. ಭೈರಪ್ಪ ಅವರ ಕಾದಂಬರಿಯನ್ನು ತಿಳಿಯಬೇಕೆ? ಡಾ. ಚಂದ್ರಶೇಖರ ಕಂಬಾರರ ಸಿಂಗಾರೆವ್ವ , ಸುಧಾಮೂರ್ತಿ ಅವರ ಮನದ ಮಾತು ಪುಸ್ತಕ ಓದಿಲ್ಲವೆ? ಚಿಂತಿಸಬೇಡಿ. ಅವೆಲ್ಲವೂ ಆಡಿಯೋ ರೂಪದಲ್ಲಿ ಬುಕ್‍ಸ್ಟಕ್ ವೆಬ್‍ಸೈಟಿನಲ್ಲಿ ಕೈಗೆಟುಕುವ ಬೆಲೆಗೆ ಲಭ್ಯವಿವೆ. ಈ ಪುಸ್ತಕಗಳೆಲ್ಲವನ್ನು ರಂಗಕರ್ಮಿಗಳಾದ ಸಿ.ಆರ್.ಸಿಂಹ, ಋತ್ವಿಕ್‍ಸಿಂಹ, ಲಕ್ಷ್ಮೀ ಚಂದ್ರಶೇಖರ್ ಮುಂತಾದವರು ತಮ್ಮ ಅತ್ಯದ್ಭುತ ಕಂಠಸಿರಿಯೊಂದಿಗೆ ನಿರೂಪಣೆ ಮಾಡಿದ್ದಾರೆ. 2009ರ ನವೆಂಬರ್‍ನಲ್ಲಿ ಜೈ ಜೆಂಡೆ ಮತ್ತು ಜಯಶ್ರೀ ಮಂತ್ರಿ ಈಶ್ವರನ್  ಜಂಟಿಯಾಗಿ ಬೆಂಗಳೂರಿನಲ್ಲಿ ಬುಕ್‍ಸ್ಟಕ್ ಆರಂಭಿಸಿದರು. ಆಡಿಯೋ ಪುಸ್ತಕಗಳು ಅತೀ ವಿರಳವಾಗಿರುವುದೇ  ಈ ಸಾಹಸಕ್ಕೆ ಪ್ರೇರಣೆ. ಆಡಿಯೋ ಪುಸ್ತಕಗಳ ಮುಖಾಂತರ ಇನ್ನೂ ಹೆಚ್ಚಿನ ಕನ್ನಡಿಗರನ್ನು ತಲುಪುವುದು ಅಥವಾ ಕನ್ನಡ ಸಾಹಿತ್ಯವನ್ನು ಹೆಚ್ಚೆಚ್ಚು ಕನ್ನಡಿಗರಿಗೆ ತಲುಪಿಸುವುದು ಅವರ ಈ ಸಾಹಸದ ಹಿಂದಿನ ಮುಖ್ಯ ಉದ್ದೇಶ. ಆಡಿಯೋ ಪುಸ್ತಕಗಳಿಂದ ದೃಷ್ಟಿಹೀನರಿಗೆ, ಬೇರೆ ಬೇರೆ ಭಾಷೆಗಳ ಜ್ಞಾನವಿದ್ದೂ, ಕೇಳಿಸಿಕೊಳ್ಳಬಲ್ಲವರಿಗೆ ಇದು ವರದಾನವಾಗಲಿದೆ. ಕನ್ನಡದ ಅನೇಕ ಶ್ರೇಷ್ಠ ಸಾಹಿತ್ಯಗಳು, ಆಡಿಯೋ ಪುಸ್ತಕಗಳ ಮುಖಾಂತರ ಆಸಕ್ತರಿಗೆ ತಲುಪುತ್ತಿವೆ. ಅನಿವಾಸಿ ಭಾರತೀಯರಿಂದ ಕೂಡ ಆಡಿಯೋ ಪುಸ್ತಕಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಪ್ರತಿದಿನವೂ ಈ ಪಟ್ಟಿಗೆ ಹತ್ತಾರು ಪುಸ್ತಕಗಳು ಸೇರ್ಪಡೆಯಾಗುತ್ತಿವೆ. ಯೂ ಟ್ಯೂಬ್‍ನಲ್ಲಿಯೂ ಹಲವಾರು ಭಾಷೆಗಳ ಆಡಿಯೋ ಪುಸ್ತಕಗಳು ಲಭ್ಯವಿವೆ.

ಅನಕ್ಷರಸ್ಥರಿಗೂ ಪ್ರಯೋಜನಕಾರಿ 

ನಿಮಗೆ ಲಿಪಿ ತಿಳಿಯದೇ ಕೇವಲ ಭಾಷೆ ಅರ್ಥವಾಗುವಂತಿದ್ದರೆ, ಅನ್ಯ ಭಾಷೆಯ ಸಾಹಿತ್ಯದ ಜನಪ್ರಿಯ ಕೃತಿಗಳನ್ನು ಸಲೀಸಾಗಿ ಕೇಳಬಹುದು. ಉದಾಹರಣೆಗೆ ಕೊಡಗಿನ ಜನತೆಯಲ್ಲಿ ಬಹುಸಂಖ್ಯಾತರಿಗೆ ಮಲೆಯಾಳಂ, ತುಳು, ಬ್ಯಾರಿ, ತಮಿಳು, ತೆಲುಗು, ಮರಾಠಿ, ಕೊಂಕಣಿ, ಮರಾಠಿ, ಬಾಂಗ್ಲಾ, ಹಿಂದಿ, ಇಂಗ್ಲೀಷ್ .... ಸೇರಿದಂತೆ ವಿವಿಧ ಭಾಷೆಗಳ ಬಗ್ಗೆ ಅಪೂರ್ವ-ಅಪಾರ ಜ್ಞಾನವಿದೆ. ಅದರೆ, ಇವರಲ್ಲಿ ಬಹುತೇಕ ಮಂದಿಗೆ ಈ ಭಾಷೆಗಳನ್ನು ಓದಿ ಅರಗಿಸಿಕೊಳ್ಳುವುದು ಅಸಾಧ್ಯ. ಇಂತಹವರು ಅನ್ಯ ಭಾಷೆಗಳ ಸಾಹಿತ್ಯದ ಬಗ್ಗೆ ಒಲವು ಹೊಂದಿರುವವರು ಕೇಳುವಿಕೆಯ ಕೃತಿಗಳ ಲಾಭ ಪಡೆಯಬಹುದು.  ಉದಾಹರಣೆಗಾಗಿ ಸಾಹಿತ್ಯ ಅಭಿಮಾನಿಗೆ ಮಲೆಯಾಳಂ ಸಾಹಿತ್ಯದಲ್ಲಿ ಲಭ್ಯವಾಗುವ ಮಾಂತ್ರಿಕ ಕಥೆಗಳು ಇಷ್ಟವಾಗಬಹುದು. ಆದರೆ, ಅವುಗಳ ಅನುವಾದ ಕಾಲ-ಕಾಲಕ್ಕೆ ಲಭ್ಯವಿಲ್ಲ. ಅದೇ ರೀತಿ ತೆಲುಗಿನ ರಾಜಾ ಚೆಂಡೂರ್ ಅವರ ಅಪೂರ್ವ ಸಾಹಿತ್ಯ, ಯಂಡೂಮೂರಿ ವೀರೇಂದ್ರನಾಥ್ ಅವರ ಕುತೂಹಲ ಕೆರಳಿಸುವ  ಅಮೋಘ ಸಾಹಿತ್ಯವು ಶೋತೃಗಳ ಕಿವಿಯನ್ನು ತಲುಪಲು ಸಾಧ್ಯ.  ಅದೂ ಅತ್ಯಂತ ಕಡಿಮೆ ಬೆಲೆಯಲ್ಲಿ....!?
 ಬಹುಶ್ಯ ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿದರೆ,  ಮುಂಬರುವ ದಿನಗಳಲ್ಲಿ ಕೇಳುವ ಪುಸ್ತಕಗಳು ಮಾತ್ರ ಬಿಡುಗಡೆ ಕಾಣಬಹುದೇನೋ ಎಂಬ ಸಂಶಯ ಕಾಣುತ್ತಿದೆ-ಕಾಡುತ್ತಿದೆ. ಮಾಧ್ಯಮಗಳು ಕೂಡಾ ಕೇಳುವ ಪುಸ್ತಕಗಳಿಗೆ ಹೆಚ್ಚು-ಹೆಚ್ಚು  ಪ್ರಚಾರ ನೀಡಿದಲ್ಲಿ ಇದು ಸಾಹಿತ್ಯಾಸಕ್ತರನ್ನು ಶೀಘ್ರವಾಗಿ ತಲುಪೀತು. ಕೊಡಗಿನ ಸಾಹಿತಿಗಳು ಕೇವಲ ಮುದ್ರಣ ಮಾಧ್ಯಮದಲ್ಲಿ ಪುಸ್ತಕ ಹೊರತರುವುದರ ಬದಲು ಈ ಬಗ್ಗೆ ಚಿಂತನೆ ನಡೆಸುವಂತಾಗಬೇಕು. ಕನ್ನಡ ಭಾಷೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಆಡಿಯೋ ಪುಸ್ತಕಗಳು “ಟೋಟಲ್ ಕನ್ನಡ ಡಾಟ್ ಕಾಂ” ನಲ್ಲಿ 10 ರಿಂದ 1200 ರೂಪಾಯಿಗಳವರೆಗೆ ಲಭ್ಯ.
 

ಉಚಿತ ಆನ್‍ಲೈನ್ ಪುಸ್ತಕಗಳು

ಜಗತ್ತಿನ ವಿವಿಧ ಭಾಷೆಯ ಓದುವ ಪುಸ್ತಕಗಳು ಉಚಿತವಾಗಿ ಆನ್‍ಲೈನ್‍ನಲ್ಲಿ ಲಭ್ಯವಿದೆ.  ಕೊಂಡು ಓದಬಹುದಾದ ಪುಸ್ತಕಗಳು ಇವೆ. ಕೆಲವನ್ನು ಡೌನ್‍ಲೋಡ್ ಮಾಡಿಕೊಂಡು ಆಫ್‍ಲೈನ್‍ನಲ್ಲಿಯೂ ಓದಬಹುದು. ಆದರೆ, ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಸಂಖ್ಯೆಯ ಪುಸ್ತಕಗಳು (ಕೇಳುವ) ಆಸಕ್ತರಿಗೆ ಲಭ್ಯವಾಗಲು ಇನ್ನೂ ಅದೆಷ್ಟು ಸಮಯ ಬೇಕಾಗಬಹುದೇನೋ... ತಿಳಿದಿಲ್ಲ.  ಆದರೆ, ಉಚಿತ............!?

ಬಳಕೆಯಾಗದ ಅನುದಾನ

 ಕನ್ನಡ ಭಾಷೆಗೆ ಶಾಸ್ತೀಯ ಸ್ಥಾನಮಾನ ನೀಡಿದ್ದರ ಪರಿಣಾಮ ಭಾಷೆಯ ಬೆಳವಣಿಗೆಗಾಗಿ ಕೇಂದ್ರ ಸರಕಾರ ಭಾರೀ ಮೊತ್ತದ ಅನುದಾನ ನೀಡಿತ್ತು.  ಆದರೆ, ಕನ್ನಡಾಭಿಮಾನಿಗಳ ನಿರ್ಲಕ್ಷ ಮತ್ತು ಜ್ಞಾನದ ಕೊರತೆಯಿಂದಾಗಿ ಇದು ಇನ್ನೂ ಸದ್ಭಳಕೆಯಾಗಿಲ್ಲ. ಈ ಬೃಹತ್ ಮೊತ್ತವನ್ನು ಆಸಕ್ತ ಓದುಗರಿಗೆ ಆನ್‍ಲೈನ್‍ನಲ್ಲಿ ಉಚಿತ ಪುಸ್ತಕಗಳ ಓದಿಗಾಗಿ ಅದರ  ಬಳಕೆಗಾಗಿ ವಿನಿಯೋಗಿಸಬಹುದಿತ್ತು. ಈ ಬಗ್ಗೆ ಯಾವುದೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಈವರೆಗೆ  ಯಾರೂ ಸಹಾ ಚಕಾರವನ್ನೂ ಎತ್ತಿಲ್ಲ ! ಆದರೆ, ನಮ್ಮವರು ಈ ನಿಟ್ಟಿನಲ್ಲಿ ಚಿಂತನೆಯನ್ನೇ ಮಾಡದಿರುವುದರಿಂದ ಕನ್ನಡ ಸಾಹಿತ್ಯಲೋಕಕ್ಕೆ  ಭರಿಸಲಾರದ ನಷ್ಟವಾಗಿದೆ ಎಂದೂ ಘಂಟಾಘೋಷವಾಗಿ ಹೇಳಬಹುದು.

ಸಾಹಿತ್ಯಾಸಕ್ತರಿಗೆ  ಮಾಹಿತಿ ಕೊರತೆ 

ವಯಸ್ಸಾದವರು ನನಗೆ ದೃಷ್ಟಿದೋಷವಿದೆ. ನಾನು ಇನ್ನು ಓದಲು ಸಾಧ್ಯವಿಲ್ಲ. ಎಂದೇನೂ ಇನ್ನು ಕೊರಗಬೇಕಿಲ್ಲ.  ಕೇಳಿಸಿದರೆ ಸಾಕು.  ಎಲ್ಲರಿಗೂ ಸುಲಭದಲ್ಲಿ ಸಾಹಿತ್ಯ ಜ್ಞಾನ ಲಭ್ಯ !  ಇದರ ಲಾಭವನ್ನು ನಿರಕ್ಷರಿಗಳೂ ಪಡೆಯಬಹುದಾಗಿದೆ. ಅದೇ ಇದರ ವೈಶಿಷ್ಟ್ಯ. ದುರಾದೃಷ್ಟವಶಾತ್ ಈ ವಿಚಾರ ಬಹುತೇಕ ಕನ್ನಡದ ಸಾಹಿತ್ಯಪ್ರಿಯರಿಗೆ ತಿಳಿದಿಲ್ಲ ಎಂದು ವಿಷಾದದಿಂದ ಹೇಳಬೇಕಾಗಿದೆ. ಅದೇನೇ ಇರಲಿ ಬಿಡಿ.... ಕೇಳುವ  ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಪ್ರಚಾರ ದೊರೆತಿಲ್ಲ ಎನ್ನುವುದಂತು ಕಟುಸತ್ಯ.  ಕನ್ನಡ ಸಾಹಿತ್ಯ ಪರಿಷತ್‍ನ  ರಾಜ್ಯ, ಜಿಲ್ಲಾ, ತಾಲೂಕು, ಹೋಬಳಿ ಘಟಕಗಳು ಕೇಳುವ ಪುಸ್ತಕಗಳನ್ನು ಶೋತೃಗಳಿಗೆ ನೀಡುವ  ಈ ನಿಟ್ಟಿನಲ್ಲಿ ಚಿಂತನ-ಮಂಥನ ನಡೆಸುವ ಅಗತ್ಯವಿದೆ. ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ನಾವು ಕಾಲಕ್ಕೆ ತಕ್ಕಂತೆ ಬದಲಾದಲ್ಲಿ ಶ್ರಾವ್ಯ ಮಾಧ್ಯಮದಲ್ಲಿಯೂ ಪುಸ್ತಕಗಳನ್ನು ಬಿಡುಗಡೆ ಮಾಡುವ ಕುರಿತು ಸಾಹಿತಿಗಳು, ವಿಚಾರವಂತರು, ಸಾಹಿತ್ಯಾಸಕ್ತರು ಚಿಂತನೆ ನಡೆಸಿ, ಅದನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರಬೇಕಿದೆ.ಹೀಗಾದಲ್ಲಿ ಸಾಹಿತ್ಯವು ಕಡಿಮೆ ಸಮಯ ಮತ್ತು ಖರ್ಚಿನಲ್ಲಿ ಅಧಿಕ ಶೋತೃವರ್ಗಕ್ಕೆ ತಲುಪುವುದು ನಿಶ್ಚಿತ.

ಕಾಳುಮೆಣಸಿಗೆ ಜೈವಿಕ ಗೊಬ್ಬರ


     

 ಕಾಳುಮೆಣಸಿಗೆ ಜೈವಿಕ ಗೊಬ್ಬರ ಏಕೆ ? ಹೇಗೆ ? 

              ಬರಹ : ಕೂಡಂಡ ರವಿ, ಹೊದ್ದೂರು.  


 

ಕೊಡಗು ಸೇರಿದಂತೆ ವಿವಿಧೆಡೆಗಳಲ್ಲಿ ಕಾಳು ಮೆಣಸನ್ನು ಹೆಚ್ಚಿನ ಪ್ರಮಾಣದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯುವರು. ಇದನ್ನು ಕಡಿಮೆ ಖರ್ಚಿನಲ್ಲಿ  ಬೆಳೆದು  ಅಧಿಕ ಇಳುವರಿ ಪಡೆದ್ದಲ್ಲಿ  ಬೆಳೆಗಾರ ಬಮಧುಗಳಿಗೆ ವರದಾನವಾಗಲಿದೆ.  ಈ ನಿಟ್ಟಿನಲ್ಲಿ ಬೆಳೆಗಾರರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರವು ಹಲವಾರು ಯೋಜನೆಗಳನ್ನು ರೂಪಿಸಿದೆ. 

ಅದರಂತೆ  ಈ ಸಂಸ್ಥೆಯು ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹ ಎಂಬ ಜೈವಿಕ ಗೊಬ್ಬರವನ್ನು ಕಾಳು ಮೆಣಸು ಬೆಳೆಯಲ್ಲಿ  ಬಳಸಿ ಶೀಘ್ರ ಸೊರಗು ಮತ್ತು ಹಳದಿ ರೋಗವನ್ನು ಹತೋಟಿ ಮಾಡಲು ಶಿಫಾರಸ್ಸು ಮಾಡಿರುವರು. ಬೆಳೆಗಾರ ಬಂಧುಗಳು ಈ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಕಾಳುಮೆಣಸಿನಲ್ಲಿ ಬಳಸಿ ಇಳುವರಿ ಹೆಚ್ಚಿಸಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ.ವೀರೇಂದ್ರ ಕುಮಾರ್ ಮನವಿ ಮಾಡಿದ್ದಾರೆ. 

        ಗೊಬ್ಬರದಿಂದ ರೋಗ ಹತೋಟಿ ! 

ಅರ್ಕಾ ಸೂಕ್ಷಾಣು  ಸಮೂಹವನ್ನು ಕಾಳುಮೆಣಸಿಗೆ ಬಳಸುವುದರಿಂದ ಬಳ್ಳಿಗಳು ಹೊಸದಾಗಿ ಚಿಗುರು ಬರಲು, ಶೀಘ್ರ ಸೋರಗು ರೋಗವನ್ನು ಹತೋಟಿ ಮಾಡಲು, ಕೊತ್ತು ಬೀಳುವ ಸಮಸ್ಯೆಯನ್ನು ಕಡಿಮೆಮಾಡಲು ಮತ್ತು ಉತ್ತಮವಾಗಿ ಬೇರು ಬರಲು ಸಹಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.  

ಜೈವಿಕ ಗೊಬ್ಬರಗಳು ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಗುಣ ವಿಶೇಷತೆಯಿಂದ ಪ್ರಾಮುಖ್ಯತೆಯನ್ನು ಪಡೆದಿರುತ್ತವೆೆ. ಪ್ರಸ್ತುತ ಜೈವಿಕ ಗೊಬ್ಬರಗಳ ಬಳಕೆ ಬಗ್ಗೆ ಸರಿಯಾದ ಮಾಹಿತಿಯಿಲ್ಲದಿರುವುದರಿಂದ, ಜೈವಿಕ ಸಂಪನ್ಮೂಲಗಳ ಮತ್ತು ತಂತ್ರಜ್ಞಾನದ ಕೊರತೆಯಿಂದಾಗಿ ಜೈವಿಕ ಗೊಬ್ಬರಗಳ ಬಳಕೆ ಕಡಿಮೆಯಾಗಿರುತ್ತದೆ. ಈ ಕೊರತೆಯನ್ನು ನೀಗಿಸಲು ಮತ್ತು ಒಂದೇ ರೀತಿಯ ಜೈವಿಕ ಗೊಬ್ಬರಗಳ ಬಳಕೆಯಿಂದ ಉಂಟಾಗುವ ಅಧಿಕ ಖಚರ್ು ಮತ್ತು ಕಡಿಮೆ ಕಾರ್ಯ ಕ್ಷಮತೆಯ ನ್ಯೂನತೆಯನ್ನು ಹೋಗಲಾಡಿಸಲು  ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ  ಸಂಸ್ಥೆ,  ಜೈವಿಕ ಗೊಬ್ಬರ ಅಕರ್ಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಉತ್ಕೃಷ್ಟ ತಂತ್ರಜ್ಞಾನದೊಂದಿಗೆ ಅಭಿವೃದ್ದಿಪಡಿಸಿದೆ ಎಂದು ಅವರು ತಿಳಿಸಿದ್ದಾರೆ.  

 


ಸೂಕ್ಷ್ಮಾಣು ಜೀವಿಗಳ ಸಮೂಹದ ಉಪಯೋಗಗಳು

* ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ (ಅಜಟೋಬ್ಯಾಕ್ಟರ್ ಟ್ರೋಪಿಕಾಲಸ್, ಬೆಸಿಲ್ಲಸ್ ಆರ್ಯಭಟ ಮತ್ತು ಸುಡೋಮೋನಾಸ್ ಥಾಯ್ವಾನೆನ್ಸಿಸ್) ಕಾರ್ಯಕ್ಷಮತೆಯನ್ನು ಹೊಂದಿರುತ್ತದೆ.

* ಈ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಬಳಸುವುದರಿಂದ ಕಾಳುಮೆಣಸಿನ ಗಿಡ ಹಳದಿಯಾಗುವುದನ್ನು ತಡೆಗಟ್ಟುತ್ತದೆ ಹಾಗೂ ಬೇರಿನ ಬೆಳವಣಿಗೆ ಉತ್ತಮವಾಗಿದ್ದು, ಶೀಘ್ರ ಸೊರಗು ರೋಗವನ್ನು ಹತೋಟಿಯಲ್ಲಿಡುತ್ತದೆ. 

* ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹದ ಬಳಕೆಯಿಂದ ಸಸ್ಯದ ಬೆಳವಣಿಗೆ,ರೋಗ ನಿಯಂತ್ರಣ ಮತ್ತು ಇಳುವರಿ ಅಧಿಕಗೊಳ್ಳುತ್ತದೆ. 

* ಜೈವಿಕ ಗೊಬ್ಬರವನ್ನು ಬೀಜೋಪಚಾರ, ಮಣ್ಣಿಗೆ, ಕೊಟ್ಟಿಗೆ ಗೊಬ್ಬರ ಮತ್ತು ಬೇವಿನ ಹಿಂಡಿಯ ಜೊತೆ ಮಿಶ್ರಣಮಾಡಿ ರೈತರು ಸುಲಭವಾಗಿ ಬಳಸಬಹುದು. 

* ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ ಸೂಕ್ಷ್ಮಾಣು ಜೀವಿಗಳನ್ನು ಬೇರೆ ಬೇರೆಯಾಗಿ ಹಾಕುವ ಅವಶ್ಯಕತೆಯಿಲ್ಲದೆ ರೈತರು ವಿವಿಧ ಬೆಳೆಗಳಿಗೆ ಬಳಸಬಹುದು.

ಬೀಜವು ಬೇಗ ಮೊಳೆಕೆಯೊಡೆಯುವಂತೆ ಮಾಡಿ ಸಸ್ಯದ ಬೆಳವಣಿಗೆ ಮತ್ತು ಧೃಡತೆಯನ್ನು ಹೆಚ್ಚಿಸುತ್ತದೆ.

 * ಶಿಫಾರಸ್ಸು ಮಾಡಿದ ಸಾರಜನಕ ಮತ್ತು ರಂಜಕಯುಕ್ತ ಗೊಬ್ಬರಗಳಲ್ಲಿ ಶೇ. 25 ರಷ್ಟು ಪ್ರಮಾಣವನ್ನು ಕಡಿಮೆ ಮಾಡುತ್ತದೆ.


ಬಳಸುವ ವಿಧಾನ 

ಕೊಟ್ಟಿಗೆ ಗೊಬ್ಬರ ಅಥವಾ ಕಹಿಬೇವಿನ ಹಿಂಡಿಗೆ ಸೇರಿಸುವ ವಿಧಾನ: 5 ಕೆ.ಜಿ ಅಕರ್ಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು 500 ಕೆ.ಜಿ ಕೊಟ್ಟಿಗೆ ಗೊಬ್ಬರ ಅಥವಾ 2 ಕೆ.ಜಿ ಅಕರ್ಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು 100 ಕೆ.ಜಿ ಕಹಿಬೇವಿನ ಹಿಂಡಿಯ ಜೊತೆ ಚೆನ್ನಾಗಿ ಮಿಶ್ರಣ ಮಾಡಿ ಕಾಳುಮೆಣಸು ಬೆಳೆಗಳಿಗೆ ಉಪಯೋಗಿಸಬೇಕು. 

ಬೆಳೆಗಳಿಗೆ ನೇರವಾಗಿ ಉಪಯೋಗಿಸುವ ವಿಧಾನ: 4 ಕೆ.ಜಿ ಅಕರ್ಾ ಸೂಕ್ಷ್ಮಾಣು ಜೀವಿಗಳ ಸಮೂಹ ಮತ್ತು ಒಂದು ಕೆ.ಜಿ ಬೆಲ್ಲವನ್ನು 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಗಿಡದ ಬುಡ ಭಾಗಕ್ಕೆ ನೇರವಾಗಿ (4 ರಿಂದ 5 ಲೀಟರ್ನಷ್ಟು) ಮೇ-ಜೂನ್, ಆಗಸ್ಟ್ ಮತ್ತು ನವೆಂಬರ್ ತಿಂಗಳಿನಲ್ಲಿ ಸುರಿಯಬೇಕು ಎಂದು ಅವರು ಮಾಹಿತಿ ನೀಡಿರುವರು.  

     ಅರ್ಕಾ ಸೂಕ್ಷಾಣು ಜೀವಿಗಳ ಸಮೂಹವು ಗೋಣಿಕೊಪ್ಪಲುವಿನ  ಕೃಷಿ ವಿಜ್ಞಾನ ಕೇಂದ್ರ, ಲಭ್ಯವಿದೆ.   ಬೆಳೆಗಾರ ಬಂಧುಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. 


ಕಾರ್ಯಕ್ರಮ ಸಂಯೋಜಕರು, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ದೂರವಾಣಿ ಸಂಖ್ಯೆ: 08274-247274, ಇವರಿಂದ ಅಧಿಕ ಮಾಹಿತಿಯನ್ನು ಪಡೆಯಬಹುದಾಗಿದೆ.