ಶುಕ್ರವಾರ, ಮಾರ್ಚ್ 9, 2018

                        Pepper Nursery   ಕಾಳು ಮೆಣಸು - ಸಸ್ಯಾಭಿವೃದ್ಧಿ      

ಕೊಡಗಿನಲ್ಲಿ ಕಾಳು ಮೆಣಸು ಬಳ್ಳಿಗಳ ಸಸ್ಯಾಭಿವೃದ್ಧಿಗೆ  ಈ ತಿಂಗಳು ಸೂಕ್ತ ಕಾಲವಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಿಗಳು, ಪರಿಣಿತರು ಆಸಕ್ತರಿಗೆ ಈ ಕೆಳಕಂಡ ವಿವರಗಳನ್ನು ನೀಡಿದ್ದಾರೆ.

ಸಸ್ಯಾಭಿವೃದ್ಧಿ

ಉಪಯುಕ್ತವಿರುವ ಸಸ್ಯಗಳನ್ನು ಆರಿಸಿ ಕ್ರಮಬದ್ಧ ರೀತಿಯಲ್ಲಿ ವೃದ್ಧಿಪಡಿಸುವುದಕ್ಕೆ ಸಸ್ಯಾಭಿವೃದ್ಧಿ ಎನ್ನುತ್ತೇವೆ. ಆದರೆ, ವಾಣಿಜ್ಯವಾಗಿ ಹೆಚ್ಚಿನ ಇಳುವರಿಯನ್ನು ಪಡೆಯಲು ಹರಿದಾಡುವ ಕಾಂಡದ ತುಂಡುಗಳನ್ನು ಬಳಸುವುದು ಸೂಕ್ತ. 
ವಿವಿಧ ಬಗೆಯ ಕಾಂಡಗಳು : ಕಾಳುಮೆಣಸಿನಲ್ಲಿ ಐದು ವಿವಿಧ ಬಗೆಯ ಕಾಂಡಗಳನ್ನು ಗುರುತಿಸಬಹುದು. ಈ ಕಾಂಡಗಳು ಜೀವ ಶಾಸ್ತ್ರೀಯವಾಗಿ ವಿಭಿನ್ನ ಕಾರ್ಯಗಳನ್ನು ನಿರ್ವಹಿಸುತ್ತವೆ.


ಮುಖ್ಯ ಕಾಂಡಗಳು

ಇದು ಭೂಮಿಯಿಂದ ನೇರವಾಗಿ ಬೆಳೆದು ಆಧಾರ ಮರಕ್ಕೆ ಅಂಟಿಕೊಂಡಿರುತ್ತದೆ.
ಹರಿದಾಡುವ ಕಾಂಡಗಳು: ಇದು ಮುಖ್ಯವಾಗಿ ಕಾಂಡದ ಕೆಳಭಾಗದಲ್ಲಿ ನೆಲದ ಮೇಲೆ ಹರಡಿಕೊಂಡು ಹೋಗುತ್ತವೆ. ಇಂತಹ ಹರಿದಾಡುವ ಕಾಂಡಗಳನ್ನು ಕಾಳುಮೆಣಸಿನ ಗಿಡಗಳನ್ನು ಉತ್ಪಾದಿಸಲು ಬಳಸಬೇಕು.
ಫಸಲು ಬಿಡುವ ಕಾಂಡಗಳು: ಈ ಕಾಂಡಗಳಿಂದ ಕಾಳುಮೆಣಸಿನ ಹೂಗೊಂಚಲುಗಳು ಮೂಡುತ್ತವೆ. ಆದ್ದರಿಂದ ಫಸಲು ಬಿಡುವ ಕಾಂಡಗಳನ್ನು ಪೆÇದೆ ಮೆಣಸು ಗಿಡಗಳನ್ನು ಉತ್ಪಾದಿಸಲು ಬಳಸಬೇಕು.


ಮೇಲಕ್ಕೆ ಹಬ್ಬುವ ಕಾಂಡಗಳು (ಚಿಗುರು ಬಳ್ಳಿ)

 ಈ ಕಾಂಡಗಳು ಮುಖ್ಯ ಕಾಂಡದಿಂದ ನೇರವಾಗಿ ಆಧಾರ ಮರಕ್ಕೆ ಅಂಟಿಕೊಂಡು ಬೆಳೆಯುತ್ತವೆ.
ನೇತಾಡುವ ಕಾಂಡಗಳು: ಈ ಕಾಂಡಗಳು ಫಸಲನ್ನು ಬಿಡದೆ ಕಡೆ ನೇತಾಡುತ್ತಿರುತ್ತವೆ. ಕಾಳುಮೆಣಸಿನಲ್ಲಿ ಹಲವು ಬಗೆಯ ಕಾಂಡಗಳಿದ್ದರೂ ಪ್ರತಿಯೊಂದು ಕಾಂಡಗಳು ವಿಶಿಷ್ಟವಾದ ಕಾರ್ಯಗಳನ್ನು ನಿರ್ವಹಿಸುತ್ತವೆ. ಕಾಳುಮೆಣಸಿನ ಸಸ್ಯಾಭಿವೃದ್ದಿಗಾಗಿ ಹರಿದಾಡುವ ಕಾಂಡಗಳನ್ನು ಮಾತ್ರ ಉಪಯೋಗಿಸಬೇಕು.

ಸಸ್ಯಾಭಿವೃದ್ದಿ ಕ್ರಮ-ವಿವಿಧ ಹಂತಗಳು

ತಾಯಿ ಬಳ್ಳಿಯನ್ನು ಗುರುತಿಸುವುದು.: ಸಸ್ಯಾಭಿವೃದ್ಧಿಗಾಗಿ ವಿಶೇಷವಾದ ಗುಣಗಳಿರುವ ತಾಯಿ ಬಳ್ಳಿಗಳನ್ನು ಗುರುತಿಸಬೇಕು. ಅಂದರೆ ಅಧಿಕ ಇಳುವರಿ ಕೊಡುವ 5 ರಿಂದ 12 ವರ್ಷದೊಳಗಿನ ಸದೃಡವಾಗಿ ಬೆಳೆದ, ಅತಿ ಹೆಚ್ಚು ಕಾಯಿಗೊಂಚಲುಗಳಿರುವ ಹಾಗೂ ರೋಗ ಮುಕ್ತ ಮತ್ತು ರೋಗಗಳನ್ನು ಸಹಿಸಿಕೊಳ್ಳುವ, ನೆಲದ ಮೇಲೆ ಹರಿದು ಹೋಗುವ ಹಂಬು ಬಳ್ಳಿಗಳನ್ನು ಗುರುತಿಸಬೇಕು. ಗುರುತಿಸಿದ ಬಳ್ಳಿಗಳನ್ನು ಡಿಸೆಂಬರ್ – ಜನವರಿ ತಿಂಗಳಿನಲ್ಲಿ ಸುರಳಿ ಸುತ್ತಿ ಆಧಾರ ಮರಕ್ಕೆ ಕಟ್ಟಿ ಇಟ್ಟುಕೊಳ್ಳಬೇಕು. ಗುರುತಿಸಿದ ಹಂಬು ಬಳ್ಳಿಯು ನೆಲದಲ್ಲಿ ಹರಡಿ ಬೇರು ಬಿಡದ ಹಾಗೆ ನೋಡಿಕೊಳ್ಳಬೇಕು.

ಮಿಶ್ರಣ ತಯಾರಿಕೆ

 ಕಾಡು ಮಣ್ಣು, ಕೊಟ್ಟಿಗೆ ಗೊಬ್ಬರ ಹಾಗೂ ಮರಳನ್ನು 2:1:1 ರ ಪ್ರಮಾಣದಲ್ಲಿ ಪದರ ಪದರವಾಗಿ ಹಾಕಿ 30 ದಿನಗಳವರೆಗೆ ಬಿಡಬೇಕು. ಈ ಮಿಶ್ರಣದ ಮೇಲೆ ಚೆನ್ನಾಗಿ ನೀರನ್ನು ಹಾಕಿದ ಮೇಲೆ ಕಪ್ಪು ಪಾಲಿಥೀನ್ ಹಾಳೆಯಿಂದÀ  ಗಾಳಿ ಹೋಗದಂತೆ 30 ದಿನಗಳು ಮುಚ್ಚುವುದರಿಂದ ಮಿಶ್ರಣದ ಉಷ್ಣಾಂಶ ಹೆಚ್ಚಾಗಿ ಕಳೆಯ ಬೀಜಗಳು ಹಾಗೂ ಮಣ್ಣಿನಲ್ಲಿರುವ ಕೀಟಗಳ ಮೊಟ್ಟೆಗಳು ಮತ್ತು ರೋಗಾಣುಗಳು ಸಾಯುತ್ತವೆ. ಈ ರೀತಿ ಮಾಡಿದ ಮಿಶ್ರಣದಿಂದ ರಂಧ್ರವಿರುವ 5 7 ಇಂಚುಗಳ ಅಳತೆಯಿರುವ ಪಾಲಿಥೀನ್ ಚೀಲಗಳನ್ನು ಬಿಗಿಯಾಗಿ ತುಂಬಿಸಬೇಕು. ಈ ಮಿಶ್ರಣವನ್ನು ಪಾಲಿಥೀನ್ ಚೀಲಗಳಿಗೆ ತುಂಬುವ ಮೊದಲು ಸ್ವಲ್ಪ ಪ್ರಮಾಣದ ಶಿಲಾರಂಜಕ ಮತ್ತು ಟ್ರೈಕೊಡರ್ಮಾವೆಂಬ ಜೈವಿಕ ಜೀವಾಣು ಅಥವಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಮಿಶ್ರಣಕ್ಕೆ ಸೇರಿಸಿ ಪಾಲಿಥೀನ್ ಚೀಲಗಳಿಗೆ ತುಂಬಬೇಕು.
ಕಾಂಡಗಳ ತಯಾರಿಕೆ: ಆಯ್ಕೆ ಮಾಡಿದ ಹಂಬು ಬಳ್ಳಿಯ ಕಾಂಡಗಳನ್ನು ತಾಯಿ ಬಳ್ಳಿಯಿಂದ ಬೇರ್ಪಡಿಸಿ 1/3 ನೇ ಮಧ್ಯ ಭಾಗದ ತುಂಡುಗಳನ್ನು ಕತ್ತರಿಸಿ ತೆಗೆಯಬೇಕು. ಯಾಕೆಂದರೆ ಗೆಡ್ಡೆಯ ಹಾಗೂ ತುದಿಯ ಭಾಗದ ತುಂಡುಗಳಿಂದ ಸರಿಯಾದ ಬೇರುಗಳು ಮೂಡುವುದಿಲ್ಲ. ಮಧ್ಯಭಾಗದ ತುಂಡುಗಳಿಂದ ಎಲ್ಲಾ ಎಲೆಗಳನ್ನು ಬೇರ್ಪಡಿಸಿ ಒಂದು ಗೆಣ್ಣುಗಳಿರುವಂತೆ ಕತ್ತರಿಸಿ, ತುಂಡಿನ ಕೆಳಭಾಗವನ್ನು (ನೆಡುವ ಭಾಗ) ಚೂಪಾಗಿಸಬೇಕು. ಇದು ಹೆಚ್ಚು ಬೇರು ಬಿಡುವಿಕೆಯಲ್ಲಿ ಸಹಕಾರಿಯಾಗುತ್ತದೆ.

ಕಾಂಡಗಳ ಉಪಚಾರ

ನಾಟಿಗೆ ಉಪಯೋಗಿಸುವ ತುಂಡುಗಳ ತೇವಾಂಶವು ಕಡಿಮೆಯಾಗದಂತೆ ಎಚ್ಚರ ವಹಿಸಬೇಕು.ಈ ಕಾಂಡದ ತುಂಡುಗಳನ್ನು ನರ್ಸರಿಗಳಲ್ಲಿರುವ ಪಾಲಿಥೀನ್ ಚೀಲಗಳಲ್ಲಿ ನಾಟಿಮಾಡುವ ಮೊದಲು 2 ಗ್ರಾಂ ಕಾರ್ಬೆಂಡೆಜಿಮ್ ಎಂಬ ಶಿಲೀಂದ್ರನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿದ ದ್ರಾವಣದಲ್ಲಿ 15 ನಿಮಿಷಗಳ ಕಾಲ ಅದ್ದಬೇಕು. ಇದರಿಂದ ಶಿಲೀಂದ್ರದಿಂದ ಬರುವ ರೋಗಗಳನ್ನು ಹತೋಟಿಯಲ್ಲಿಡಬಹುದು.  ಅನಂತರ ಶಿಲೀಂದ್ರದ ದ್ರಾವಣದಲ್ಲಿ ಉಪಚರಿಸಿದ ಕಾಂಡದ ತುಂಡುಗಳನ್ನು ಹೊರ ತೆಗೆದು, ಶೀಘ್ರವಾಗಿ ಬೇರು ಬರಲು ಕಾಂಡದ 2 ಸೆಂ.ಮಿ. ಕೆಳಭಾಗವನ್ನು 1 ನಿಮಿಷಗಳ ಕಾಲ 1000 ಪಿ.ಪಿ.ಎಂ ಐ.ಬಿ.ಎ ಎಂಬ ಬೇರು ಪ್ರಚೋದಕದಲ್ಲಿ ಬಳ್ಳಿಯ ಕಡ್ಡಿಯನ್ನು ತಾಕಿಸಿಬೇಕು.  1000 ಪಿ.ಪಿ.ಎಂ ಐ.ಬಿ.ಎ ದ್ರಾವಣವನ್ನು ತಯಾರಿಸಲು 1 ಗ್ರಾಂ ಐ.ಬಿ.ಎ ಪುಡಿಯನ್ನು ಸ್ವಲ್ಪ ಆಲ್ಕೋಹಾಲ್‍ನಲ್ಲಿ ಕರಗಿಸಿ 1 ಲೀಟರ್ ಸ್ವಚ್ಚವಾದ ನೀರಿನಲ್ಲಿ ಚೆನ್ನಾಗಿ ಬೆರೆಸಬೇಕು.

 ತುಂಡುಗಳನ್ನಾಟಿ

ಸುಧಾರಿತ ಪದ್ಧತಿಯನ್ನು ಅನುಸರಿಸಿ ತಯಾರಿಸಿ ತುಂಬಿದ ಪಾಲಿಥೀನ್ ಚೀಲಗಳಲ್ಲಿ ಉಪಚಾರ ಮಾಡಿದ ಒಂದು ಕಣ್ಣಿನ 2 ತುಂಡುಗಳನ್ನು ಚೀಲದ ಮಧ್ಯಭಾಗದಲ್ಲಿರಿಸಿ ಉಳಿದ ಪಾಲಿಥೀನ್ ಚೀಲದ ಭಾಗವನ್ನು ಮಿಶ್ರಣದಿಂದ ತುಂಬಿಸಬೇಕು. ಇದು ಚಿಗುರೊಡೆಯಲು ಹಾಗೂ ಬೇರು ಬಿಡಲು ಸಹಕಾರಿಯಾಗುತ್ತದೆ
.
ಪಾಲಿಥೀನ್ ಚೀಲಗಳ ಜೋಡಣೆ  
ನಾಟಿ ಮಾಡಿದ ಪಾಲಿಥೀನ್ ಚೀಲಗಳಿಗೆ ಚೆನ್ನಾಗಿ ನೀರು ಉಣಿಸಿ ನಂತರ ಪಾಲಿಥೀನ್ ಚೀಲಗಳನ್ನು ಸಾಲಾಗಿ ಜೋಡಿಸಿ ಪಾಲಿಥೀನ್ ಹಾಳೆಯಿಂದ ಕಮಾನ್ ಹಾಕಾರದಲ್ಲಿ ಮುಚ್ಚಬೇಕು. 15 ರಿಂದ 20 ದಿನಗಳ ನಂತರ ಪಾಲಿಥೀನ್ ಹಾಳೆಯನ್ನು ತೆಗೆದು ಬೆಳೆದಿರುವ ಕಳೆಗಳನ್ನು ತೆಗೆದು ನೀರು ಕೊಟ್ಟು ಪುನ; ಮುಚ್ಚಬೇಕು. ನೀರನ್ನು ಕೊಡುವುದರಿಂದ ಆದ್ರತೆ ಹೆಚ್ಚಾಗಿ 25 ರಿಂದ 30 ದಿನಗಳÀಲ್ಲಿ ಚಿಗುರೊಡೆದು ಬೇರನ್ನು ಬಿಡÀಲಾರಂಬಿಸುತ್ತವೆ.  ಈ ಹಂತದಲ್ಲಿ ಮುಚ್ಚಿದ ಪಾಲಿಥೀನ್ ಹಾಳೆಯನ್ನು ತೆಗೆದು ನೀರನ್ನು ಕೊಡಲು ಪ್ರಾರಂಭಿಸಬೇಕು. ತದನಂತರ ಬೆಳೆದು ತೋಟದಲ್ಲಿ ನಾಟಿ ಮಾಡಲು ಸಿದ್ದವಾಗುತ್ತವೆÉ.
ಗಿಡಗಳ ನಿರ್ವಹಣೆ: ಕಾಂಡದ ತುಂಡುಗಳು ಬೇರು ಬಿಟ್ಟು ಚಿಗುರಿ 3 – 4 ಎಲೆಗಳು ಬಂದ ಮೇಲೆ ಗಿಡಗಳು ಸದೃಡವಾಗಿ ಬೆಳೆಯಲು ನೀರಿನಲ್ಲಿ ಕರಗುವ ರಸಗೊಬ್ಬರಗಳಾದ 19:19:19 (5 ಗ್ರಾಂ ಪ್ರತಿ ಲೀ. ನೀರಿಗೆ) ದ್ರಾವಣವನ್ನು 2 ರಿಂದ 3 ಬಾರಿ 15 ದಿನಗಳ ಅಂತರದಲ್ಲಿ ಎಲೆಗಳ ಮೇಲೆ ಸಿಂಪಡಿಸಬೇಕು.

ರೋಗ-ಕೀಟಗಳ ನಿರ್ವಹಣೆ 

ಬೇರು ಬಿಟ್ಟ ಕಾಂಡಗಳನ್ನು ಅತಿ ಹೆಚ್ಚು ನೆರಳಿರುವ ಪ್ರದೇಶಗಳಲ್ಲಿ ಇಟ್ಟರೆ ರಸ ಹೀರುವ ಕೀಟಗಳಾದ ಥ್ರೀಪ್ಸ್ ಮತ್ತು ಹಿಟ್ಟು ತಿಗಣೆಗಳ ಬಾಧೆಯು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವುಗಳ ಹತೋಟಿಗಾಗಿ 2 ಮಿ.ಲಿ ಡೈಮಿಥೋಯೆಟ್ ಅಥವಾ 0.5 ಮಿ.ಮಿ. ಇಮೀಡಾಕ್ಲೋಪ್ರಿಡ್ ಕೀಟನಾಶಕವನ್ನು ಪ್ರತಿ ಲೀ. ನೀರಿಗೆ ಬೆರಸಿ ಸಿಂಪಡಿಸಬೇಕು.  ನರ್ಸರಿ ಪ್ರದೇಶದಲ್ಲಿ ಅತಿಯಾದ ನೆರಳು ಮತ್ತು ಆದ್ರತೆ ಇದ್ದರೆ ಶಿಲೀಂದ್ರದಿಂದ ಬರುವ ರೋಗಗಳಾದ ಎಲೆಕೊಳೆ ರೋಗ ಹಾಗೂ ಬೇರು ಕೊಳೆ ರೋಗ ಕಾಣಿಸಿಕೊಳ್ಳುತ್ತದೆ. ಇವುಗಳ ಹತೋಟಿಗಾಗಿ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್‍ನ್ನು ಪ್ರತಿ ಲೀ. ನೀರಿಗೆ ಬೆರಸಿ ಸಿಂಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - ವೀರೇಂದ್ರ ಕುಮಾರ್. ಕೆ.ವಿ ಮತ್ತು ಡಾ.ಸಾಜೂ ಜಾರ್ಜ್ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು , ದೂರವಾಣಿ: 08274-247274

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ