ಸೋಮವಾರ, ಅಕ್ಟೋಬರ್ 11, 2021

ವೈಯುಕ್ತಿಕ ಪಹಣಿ ಅಭಿಯಾನ Individual RTC Campion

 

ಕೃಷಿ ಲೋಕ.

             ವೈಯುಕ್ತಿಕ ಪಹಣಿ ಅಭಿಯಾನ

ಬರಹ: ಕೂಡಂಡ ರವಿ. ಹೊದ್ದೂರು.



ಇತ್ತೀಚಿನ ದಿನಗಳಲ್ಲಿ ರೈತರಿಗೆ ಬೆಳೆಗಾರರಿಗೆ ಸರಕಾರ ನೀಡುತ್ತಿರುವ ಹತ್ತಾರು ಸೌಲಭ್ಯಗಳು ದುರುಪಯೋಗವಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಇದನ್ನು ತಡೆಯಲು ಸರಕಾರವು ವೈಯುಕ್ತಿಕ ಪಹಣಿ(ಆರ್‌ಟಿಸಿ)ಯನ್ನು ಕಡ್ಡಾಯಗೊಳಿಸಿದೆ. ಇದರಿಂದ ಪ್ರತಿಯೊಬ್ಬರು ತಮ್ಮ ಅನುಭವ ಸ್ವಾದೀನ ಆಸ್ತಿಪಾಸ್ತಿಗೆ ಸಮರ್ಪಕ ಭೂ ದಾಖಲೆಗಳನ್ನು ಮಾಡಿಸಿಕೊಳ್ಳುವುದು ಅನಿವಾರ್ಯ. ವಿಪರ್ಯಾಸ ಎಂದರೆ, ಅಧಿಕಾರಿವರ್ಗ ಮತ್ತು ಜನಪ್ರತಿನಿಧಿಗಳು ಈ ಕುರಿತು ಚಕಾರವೆತ್ತುತ್ತಿಲ್ಲ.

ವೈಯುಕ್ತಿಕ ಪಹಣಿ

ಕೊಡಗು ಜಿಲ್ಲೆಯ ಬಹುತೇಕ ಕುಟುಂಬಗಳಲ್ಲಿ ಆಸ್ತಿಪಾಸ್ತಿಯು ಜಂಟಿಖಾತೆಯಲ್ಲಿದೆ. ಹಲವರು ಈಗಾಗಲೇ ವೈಯುಕ್ತಿಕ ಖಾತೆಗಳಿಗೆ ತಮ್ಮ ಭೂ ದಾಖಲೆಗಳನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಹಲವರು ಈಗಾಗಲೇ, ರಾಜ್ಯದಲ್ಲಿ ನಡೆಯುತ್ತಿರುವ ಪೌತಿಖಾತೆ ಅಭಿಯಾನದಡಿ ವೈಯುಕ್ತಿಕ ಪಹಣಿಮಾಡಿಸಲು ಮುಂದಾಗಿದ್ದಾರೆ.

ಇದರಿಂದಾಗಿ, ಅವರವರ ಪಾಲಿಗೆ ಬಂದಿರುವ ಕುಟುಂಬದ ಆಸ್ತಿಯು (ಅನುಭವ ಸ್ವಾದೀನ) ಅವರವರ ಹೆಸರಿನಲ್ಲಿರುತ್ತದೆ.  ಆಧಾರ್ ಕಾಡ್೵ನ ಹೆಸರಿನಲ್ಲಿರುವಂತೆ ಇದು ಬದಲಾಗಲಿದೆ.  ತದ ನಂತರ ಪಹಣಿಯ ೯ನೇ ಕಾಲಂನಲ್ಲಿ ಒಂದೇ ಹೆಸರು ಇರುತ್ತದೆ.( ಹಳೆ ಜಮಾಬಂದಿಯ ಕಾಫಿಯು ಆರ್ಟಿಸಿಯಾಗಿರುವುದರಿಂದ ಅದರಲ್ಲಿ ಕುಟುಂಬ ಸದಸ್ಯರ ಹಲವಾರು ಹೆಸರುಗಳನ್ನು ನಾವು  ಇಂದು ಕಾಣಬಹುದು.) ಇದನ್ನು ಕುಟುಂಬದ ಸದಸ್ಯರು ವೈಯುಕ್ತಿಕವಾಗಿ ಅಥವಾ ಸಾಮೂಹಿಕವಾಗಿ ಮಾಡಿಸಿಕೊಳ್ಳಲು ಸಾಧ್ಯವಿದೆ. ಸಾಮೂಹಿಕ ಪ್ರಕ್ರಿಯೆಯಿಂದ ಆರ್ಥಿಕ ಹೊರೆಕೊಂಚ ಕಡಿಮೆಯಾಗಬಹುದು. ಇದರಿಂದ ಆಸ್ತಿ ಹೊಂದಿದವರಿಗೆ ಅದರ ವಿಕ್ರಯ, ಸಾಲ ಪಡೆಯುವುದು, ನೋಂದಣಿ ಮುಂತಾದ ಪ್ರಕ್ರಿಯೆಗಳು ಅತ್ಯಂತ ಸುಲಭವಾಗಲಿವೆ. ಈ ಪ್ರಕ್ತಿಯೆಯಿಂದ ಜಂಟಿ ಖಾತೆಯು ಒಂಟಿಖಾತೆಯಾಗಿ ಬದಲಾಗಲಿದೆ.

ಬೇಕಾಗುವ ದಾಖಲೆಗಳು

ಈ ಪ್ರಕ್ರಿಯೆಗಾಗಿ ಪಹಣಿಯಲ್ಲಿ ಹೆಸರಿರುವ ಪ್ರತಿಯೊಬ್ಬರ ೨ ಪಾಸ್ ಪೋರ್ಟ್ ಆಳತೆಯ ಭಾವಚಿತ್ರಗಳು, ಸ್ವಯಂ ದೃಡೀಕೃತ ಆಧಾರ್ ಗುರುತಿನ ಚೀಟಿಯ ನಕಲು ಪ್ರತಿ ಬೇಕಾಗುತ್ತದೆ. ಜೊತೆಗೆ, ಪಹಣಿಯಲ್ಲಿ ಹೆಸರಿದ್ದು, ಅಂತಹವರು ಮರಣ ಹೊಂದಿದ್ದಲ್ಲಿ ಅಂತಹವರ ಮರಣ ದೃಡೀಕರಣ ಪತ್ರದ ನಕಲು ಪ್ರತಿಯು ಅವಶ್ಯ. ಜೊತೆಗೆ ಕುಟುಂಬ ಸದಸ್ಯರ ಒಪ್ಪಿಗೆ ಪತ್ರವೂ ಬೇಕು.  ಈಗಾಗಲೇ, ರಾಜ್ಯದಲ್ಲಿ ಪೌತಿ ಖಾತೆಯ ಆಂದೋಲನಚಾಲನೆಯಲ್ಲಿರುವುದರಿಂದ ವೈಯುಕ್ತಿಕ ಪಹಣಿ ಮಾಡಿಸುವುದು ಸುಲಭ ಎನ್ನಲಾಗಿದೆ.

ವೈಯುಕ್ತಿಕ ಪಹಣಿ ಆಂದೋಲನ

ಕುಟುAಬದ ಸದಸ್ಯರು ಈ ಸುವರ್ಣವಕಾಶವನ್ನು ಬಳಸಿಕೊಂಡು ವೈಯುಕ್ತಿಕ ಪಹಣಿಮಾಡಿಸಿಕೊಳ್ಳಬಹುದು. ಕುಟುಂಬದ ಸದಸ್ಯರು ತಮ್ಮಲ್ಲಿರಬಹುದಾದ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಅಗತ್ಯವಿರುವವರಿಗೆ ಸಂಬAಧಪಟ್ಟ ದಾಖಲೆಗಳನ್ನು ನೀಡಿ . ಈ ಪ್ರಕ್ರಿಯೆಗೆ ಸರ್ವರು ಸಕಲ ರೀತಿಯಲ್ಲಿ ಸಹಕರಿಸಿದ್ದಲ್ಲಿ ವೈಯುಕ್ತಿಕ ಅಭಿವೃದ್ಧಿಯ ಜೊತೆಗೆ ಕುಟುಂಬದ ಸರ್ವತೋಮುಖ ಶ್ರೇಯೋಭಿವೃದ್ಧಿ ಸಾಧ್ಯ. ಇದರಿಂದಾಗಿ ಕುಟುಂಬದವರು ವೈಯುಕ್ತಿಕ ಪಹಣಿಮಾಡಿಸಲು ಕೂಡಲೇ ಕಾರ್ಯ ಪ್ರವೃತ್ತರಾಗಬಹುದು,  

ಗೊಬ್ಬರಕ್ಕೆ ಸಹಾಯಧನವಿಲ್ಲ !

ವೈಯುಕ್ತಿಕ ಪಹಣಿ ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಸಹಾಯಧನದ ಮೂಲಕ ದೊರೆಯುವ ರಾಸಾಯನಿಕ ಗೊಬ್ಬರ ಕೂಡಾ ದೊರೆಯುವುದಿಲ್ಲ ಎಂಬ  ದಟ್ಟ ವದಂತಿಗಳು ಕೇಳಿಬಂದಿದೆ. ಮುಂಬರುವ ದಿನಗಳಲ್ಲಿ ವೈಯುಕ್ತಿಕ ಖಾತೆದಾರರಿಗೆ ಮಾತ್ರ ಸಹಕಾರ ಸಂಘಗಳಿಂದ ವಿವಿಧ ಸಾಲಗಳು ದೊರೆಯಲಿದೆ. ಹಲವಾರು ಬ್ಯಾಂಕ್ಗಳು ಈಗಾಗಲೇ ಈ ನಿಯಮಾವಳಿಗಳನ್ನು ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಬೆಳೆಗಾರರು, ರೈತಾಪಿ ವರ್ಗದವರು ಕೂಡಲೇ ಕಾರ್ಯ ಪ್ರವೃತ್ತರಾಗಬೇಕಿದೆ.

ಈ ಬಗ್ಗೆ ಅಧಿಕ ಮಾಹಿತಿಗಾಗಿ ಕಂದಾಯ ಇಲಾಖಾಧಿಕಾರಿಗಳು-ಸಿಬ್ಬಂದಿವರ್ಗದವರನ್ನು ಸಂಪರ್ಕಿಸಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ